Sunday, December 24, 2023

ಅಖಿಲ ಬ್ರಹ್ಮಾಂಡಗಳ ಅನ್ನದಾತ— "ರೈತ"

ಚಿತ್ರಕ್ಕೆ ಪದ್ಯ- ೭೪


ದೇವರ ರೂಪಿ ದೈವ ಸ್ವರೂಪಿ

ಅನ್ನಪೂರ್ಣೆಯ ಮಗನು.

ನಿಸ್ವಾರ್ಥ ಹೃದಯೀ ಕರುಣಾಮಯೀ

ವೈಕುಂಠವಾಸಿಯವತಾರನು.

ಅವನೇ ನಮ್ಮವ ರೈತನು.

ಅಖಿಲ ಬ್ರಹ್ಮಾಂಡಗಳ ಅನ್ನದಾತನು.


ಧರೆಯ ತಾಕಿ ಭಕ್ತಿಯ ತೋರಿ

ಎತ್ತುಗಳೊಡನೆ ಉಳುವನು.

ಭತ್ತವ ನಾಟಿ ಪ್ರೇಮದಿ ಸಾಕಿ

ನೀರುಣಿಸುತಲೇ ಬೆಳೆಸುವನು.

ಅವನೇ ನಮ್ಮವ ರೈತನು.

ಅಖಿಲ ಬ್ರಹ್ಮಾಂಡಗಳ ಅನ್ನದಾತನು.


ಬಿಸಿಲಲೂ ಗೆಯ್ಮೆ ಚಳಿಯಲೂ ಗೆಯ್ಮೆ

ಹಗಲಿರುಳ ಲೆಕ್ಕಿಸದವನು.

ಮಳೆಯೇ ವರ ಮಳೆಯೇ ಶಾಪ—

ಆದರೂ ಬಿಡದ ಚಲಗಾರನು.

ಅವನೇ ನಮ್ಮವ ರೈತನು.

ಅಖಿಲ ಬ್ರಹ್ಮಾಂಡಗಳ ಅನ್ನದಾತನು.


ಒಮ್ಮೊಮ್ಮೆ ಲಾಭ ಒಮ್ಮೊಮ್ಮೆ ನಷ್ಟ

ಇಷ್ಟ-ಕಷ್ಟಗಳೊಡನೆ ಜೀವಿಸುವನು.

ಬರೀ ನಷ್ಟ ಭಾರೀ ನಷ್ಟ—

ಏನೇ ಆದರೂ ನಿಸ್ವಾರ್ಥನು.

ಅವನೇ ನಮ್ಮವ ರೈತನು.

ಅಖಿಲ ಬ್ರಹ್ಮಾಂಡಗಳ ಅನ್ನದಾತನು.


ದೈವಕ್ಕೆ ಅನ್ನವ ಪ್ರೀತಿಯ ಜೊತೆಗೆ

ಉಣಿಸುವ ಮಹಾನುಭಾವನು.

ಭೆದವೇ ತೋರದೆ ಎಲ್ಲರ ತೃಪ್ತಿಗೆ

ಏಕೈಕ ಕಾರಣವು ಇವನು.

ಅವನೇ ನಮ್ಮವ ರೈತನು.

ಅಖಿಲ ಬ್ರಹ್ಮಾಂಡಗಳ ಅನ್ನದಾತನು.


      ----ಚಿನ್ಮಯಿ

Sunday, December 10, 2023

ಸಂಸ್ಕಾರವಿಲ್ಲದ ಮನುಷ್ಯ ಉಸಿರಾಡುವ ಹೆಣವಷ್ಟೇ...

ಮಕ್ಕಳಿಗೆ ವಿದ್ಯೆ, ಬುದ್ಧಿಗಳ ಜೊತೆ ಜೊತೆಯಲ್ಲಿ ಸಂಸ್ಕಾರ ಅವಶ್ಯವಾಗಿ ಕಲಿಸಲೇಬೇಕು- ಏಕೆಂದರೆ, ಸಂಸ್ಕಾರದಿಂದಲೇ ನಿಜವಾದ ಜೀವನದ ಪಾಠ ಅರ್ಥವಾಗೋದು, ಅದುವೇ ಜೀವನಕ್ಕೆ ಬೇಕಾಗಿರೋದು, ವಿದ್ಯೆ ಬುದ್ಧಿಯೆಲ್ಲವೂ ನಂತರವಷ್ಟೇ. ಆದರೇ, ಈಗಿನ ಕಾಲದ ಮುಕ್ಕಾಲೂ ಭಾಗ ತಂದೆ ತಾಯಂದಿರು ಈ ಅತೀ ಸೂಕ್ಷ್ಮ ಹಾಗೂ ಪ್ರಮುಖ ವಿಚಾರವನ್ನು ಕಡೆಗಣಿಸಿ, ಮರೆತು ತಮ್ಮ ಮಕ್ಕಳಿಗೆ ಕಲಿಸದಿರುವುದು ವಿಷಾದದ ಸಂಗತಿ ಹಾಗೂ ಅರ್ಧಮಕ್ಕೆ ಸಮ.

ಮನುಷ್ಯನಿಗೆ ವಿದ್ಯೆ, ಬುದ್ಧಿಗಳು ದೊರಕದಿದ್ದರೂ ಪರವಾಗಿಲ್ಲ ಆದರೇ, ಸಂಸ್ಕಾರ ಅಂತೂ ದೊರಕಲೇ ಬೇಕು- ಏಕೆಂದರೆ, "ಸಂಸ್ಕಾರವಿಲ್ಲದ ಮನುಷ್ಯ ಉಸಿರಾಡುವ ಹೆಣವಷ್ಟೇ..."

ಸಂಸ್ಕಾರವಿಲ್ಲದ ದೇಶವು ದೇಶವೇ ಅಲ್ಲ.

ಸಂಸ್ಕಾರವಿಲ್ಲದ ಮನೆಯು ಮನೆಯೇ ಅಲ್ಲ.

ಸಂಸ್ಕಾರವಿಲ್ಲದ ಮನುಷ್ಯನು ಮನುಷ್ಯನೇ ಅಲ್ಲ.


             ----ಚಿನ್ಮಯಿ